Friday, December 5, 2014

ದೇವ್ರನ್ನ ಹುಡುಕ್ಬೇಡ


ಗುಡಿಗ್ಯಾಕೆ ಹೋಗ್ತಿಯೊ ಗುಂಡಣ್ಣ
ಕಲ್ಲಿನ ಮೂರುತಿ ಅಲ್ಲೈತೊ
ಹೆತ್ತ ದೇವ್ರಿಗೆ ಕೈ ಮುಗಿದು
ಮನೆಯೇ ಗುಡಿ ಎಂದು ತಿಳಿಯಣ್ಣ !!
ದೇವ್ರು ಸೆರೆಮನೇಲಿ ಕುಂತವ್ನೆ
ನಿನಗೆಂಥ ವರವನ್ನು ಕೊಟ್ಟಾನು
ತುಪ್ಪವ ಕಲ್ಮೇಲೆ ಸುರಿತೀಯ
ಹಸಿದವನ್ಗೆ ಗಂಜೀಯ ಕೊಡಲೊಲ್ಲೆ !!
ಕಲ್ಲಿಗೆ ನಮಸ್ಕಾರ ಮಾಡೋಕೆ
ಮಾಲೆಯ ಹಾಕೊಂಡು ತಿರುಗ್ಬೇಕೆ
ಹೆತ್ತವ್ರ ನೋಡೋಕೆ ಮುನಿಸ್ಕೊಂಡು
ಗುಡಿಯೊಳ್ಗೆ ಹೋಗ್ಲಿಕ್ಕೆ ಹಾರ್ಬೇಕೆ !!
ಮಡೆಸ್ನಾನ ಪುಣ್ಯ ಅಂದ್ಕೊಂಡು
ಕಂಡವ್ರ ಎಂಜ್ಲಲ್ಲಿ ಉರುಳಾಡ್ತಿ
ತಿಂದ್ಬಿಟ್ಟ ಅನ್ನವ ತಿನ್ನೋವನ್ಗೆ
ಕಾಲಿಂದ ಒದ್ದು ಹೊರಗಾಕ್ತಿ !!
ಮಾಡಿದ ಪಾಪವು ಬೆನ್ಹಿಂದೆ
ನೆರಳಂತೆ ಬರೋದು ನಿಜ್ವಂತೆ
ಪುಣ್ಯವ ಮಾಡ್ದವ್ನಿಗೆ ಸಿಗ್ತಾರೆ
ಚಟ್ಟವ ಹೊರಲಿಕ್ಕೆ ನಾಕು ಜನ !!
ಇದ್ದಾಗ ಕೊಡ್ಬೇಕು ದೀನ್ರಿಗೆ
ಪ್ರೀತಿಯ ತೋರ್ಬೇಕು ಎಲ್ರಿಗೆ
ಆಗ ಹುಡ್ಕೊಂಡು ದೇವ್ರು ಬರ್ತಾನೆ
ಮನಸೆಂಬ ಗುಡಿಯಲ್ಲಿ ನೆಲೆಸ್ತಾನೆ !!
ದೇವ್ರನ್ನ ಹುಡುಕ್ಬೇಡ ಗುಂಡಣ್ಣ
ನಿನ್ನೊಳಗೆ ಅವ್ನು ಬಂದಾನು
ಒಳ್ಳೆಯ ಕೆಲ್ಸವ ನೀ ಮಾಡು
ಅವ್ನೆದ್ದು ಕೈ ನಿನ್ಗೆ ಮುಗಿದಾನು !!

ವಿಜಯ್ ಕುಮಾರ್

Labels:

0 Comments:

Post a Comment

Subscribe to Post Comments [Atom]

<< Home